Tuesday, May 23, 2017

ಪ್ರಚಲಿತ ವಿದ್ಯಮಾನ : 23 ಮೇ 2017 : ಷರಿಯತ್ ಪ್ರಕಾರ ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕಾಗಿ ಒಂದೇ ಸಲ ತ್ರಿವಳಿ ತಲಾಕ್ ಮೊರೆ ಹೋಗದಂತೆ ಪುರುಷರಿಗೆ ಬುದ್ಧಿವಾದ ಹೇಳಲು ಮೌಲ್ವಿಗಳಿಗೆ ಸೂಚಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ಮಂಡಳಿ, ತ್ರಿವಳಿ ತಲಾಕ್ ವಿಚಾರದಲ್ಲಿ ಮೌಲ್ವಿಗಳಿಗೆ ಮಾರ್ಗದರ್ಶಿ ಸೂತ್ರಗಳ ಸುತ್ತೋಲೆಯನ್ನು ಕಳುಹಿಸಲಾಗುವುದು. ಇದರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಪತ್ನಿಗೆ ಯಾವುದೇ ಕಾರಣಕ್ಕೂ ಒಂದೇ ಬಾರಿಗೆ ತ್ರಿವಳಿ ತಲಾಕ್ ನೀಡಬಾರದು ಹಾಗೂ ವೈವಾಹಿಕ ಜೀವನ ಅಂತ್ಯಗೊಳಿಸಲು ಈ ಪದ್ಧತಿಯ ಮೊರೆ ಹೋಗಬಾರದು. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾನೂನು ಬದ್ಧವಾಗಷ್ಟೇ ವಿಚ್ಛೇದನ ಪಡೆಯಬೇಕೆಂದು ಪುರುಷರಿಗೆ ಮೌಲ್ವಿಗಳು ಬುದ್ಧಿವಾದ ಹೇಳಬೇಕು.

ವೈವಾಹಿಕ ಪದ್ಧತಿಯಲ್ಲಿ ಪತಿ-ಪತ್ನಿಯರಿಬ್ಬರಿಗೂ ವಿಚ್ಛೇದನ ಕೋರುವುದಕ್ಕೆ ಅವಕಾಶ ಕಲ್ಪಿಸುವಂತೆ ಮೌಲಿಗಳಿಗೆ ಸೂಚಿಸಲಾಗುವುದು ಎಂದಿರುವ ಮಂಡಳಿ, ಪದ್ಧತಿಯನ್ನು ನಿಷೇಧಿಸುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ಷರಿಯತ್ ಪ್ರಕಾರ, ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿಯಾಗಿದ್ದು, ಅದರಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಆಗ ಮುಖ್ಯ ನ್ಯಾ. ಜೆ.ಎಸ್. ಖೆಹರ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ದೇವರಿಗೆ ಅನಪೇಕ್ಷಿತವಾದ ಪದ್ಧತಿ, ವೈಯಕ್ತಿಕ ಕಾನೂನಿನಲ್ಲಿ ಮಾತ್ರ ಹೇಗೆ ಸಿಂಧುವಾಗುತ್ತದೆ ಎಂದು ಪ್ರಶ್ನಿಸಿತು. ಆಗ ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್ ಅವರು, ತಲಾಕ್ ಪದ್ಧತಿ ಕುರಾನ್​ನಲ್ಲಿ ಮೊದಲೇ ಉಲ್ಲೇಖವಾಗಿರಲಿಲ್ಲ. ಅದನ್ನು ನಂತರ ಸೇರಿಸಲಾಗಿದೆ ಎಂದರು.

ತ್ರಿವಳಿ ತಲಾಕ್ ಪದ್ಧತಿಯ ಔಚಿತ್ಯದ ಕುರಿತು ಹಲವು ಸಂಘಟನೆಗಳು ಹಾಗೂ ಮುಸ್ಲಿಂ ಮಹಿಳೆಯರು ವೈಯಕ್ತಿಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸಾಂವಿದಾನಿಕ ಪೀಠ, ಮೇ 18ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ರಾಜಿ ಸಂಧಾನ ಅಗತ್ಯ: ಮುಸ್ಲಿಂ ಧರ್ಮದ ಪ್ರಕಾರ, ತ್ರಿವಳಿ ತಲಾಕ್​ಗೆ ಅವಕಾಶವಿಲ್ಲ. ಪತಿ- ಪತ್ನಿ ತಮ್ಮ ವೈಮನಸ್ಯವನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಷರಿಯತ್ ಪ್ರಕಾರ, ಅಕಾರಣವಾಗಿ ವಿಚ್ಛೇದನ ಇಲ್ಲವೇ ಒಂದೇ ಬಾರಿಗೆ ಮೌಖಿಕ ವಿಚ್ಛೇದನ ನೀಡುವುದು ಸರಿಯಾದ ಕ್ರಮವಲ್ಲ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ ಎಂದು ಮಂಡಳಿ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಸಾಮುದಾಯಿಕ ಜಾಗೃತಿಗೆ ಕ್ರಮ: ತ್ರಿವಳಿ ತಲಾಕ್ ಪದ್ಧತಿ ವಿರುದ್ಧ ಬೃಹತ್ ಪ್ರಮಾಣದ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಕೈಗೊಂಡು ಜನರು ತೀರಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ವಿಚ್ಛೇದನದ ಮೊರೆ ಹೋಗಬೇಕು. ಆದರೆ, ಅದಕ್ಕಾಗಿ ಸಾಮಾಜಿಕ ಜಾಲತಾಣಗಳು, ವೆಬ್​ಸೈಟ್​ಗಳು, ಇಮಾಮ್ ಹಾಗೂ ಮಸೀದಿಯಲ್ಲಿನ ಭಾಷಣಕಾರರ ನೆರವು ಪಡೆದು ಎಲ್ಲ ವರ್ಗದ ಮುಸ್ಲಿಂ ಸಮುದಾಯಕ್ಕೆ ಈ ಸಂದೇಶ ತಲುಪಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...