Tuesday, May 2, 2017

ಪ್ರಚಲಿತ ವಿದ್ಯಮಾನ : 02 ಮೇ 2017 : ಕರ್ಣನ್‌ ಮಾನಸಿಕ ಆರೋಗ್ಯ ತಪಾಸಣೆಗೆ ‘ಸುಪ್ರೀಂ’ ಆದೇಶ

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರ ಮಾನಸಿಕ ಆರೋಗ್ಯ ತಪಾಸಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಕರ್ಣನ್‌ ಅವರ ಪತ್ರಿಕಾ ಹೇಳಿಕೆಗಳು ಮತ್ತು ಅವರು ನೀಡಿರುವ ತೀರ್ಪುಗಳನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌್ ಈ ನಿರ್ಧಾರ ಕೈಗೊಂಡಿದೆ. ಪೊಲೀಸರ ಸಹಾಯದಿಂದ ವೈದ್ಯರ ತಂಡ ಕರ್ಣನ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ಣನ್‌, ಯಾವುದೇ ವೈದ್ಯಕೀಯ ತಪಾಸಣೆಗೆ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಕರ್ಣನ್‌ ಅವರು ಜೂನ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಅವರು ತಮ್ಮನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲ. ಹಾಗಾಗಿ ಅವರನ್ನು ಸುಮ್ಮನೆ ಬಿಟ್ಟುಬಿಡಬೇಕು ಎಂಬ ವಿನಂತಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಏಳು ಸದಸ್ಯರ ಪೀಠ  ಮಾನ್ಯ ಮಾಡಲಿಲ್ಲ. ‘ಪ್ರತಿಯೊಬ್ಬರೂ ಇಂತಹ ಆಟ ಆಡಿ ತಪ್ಪಿಸಿಕೊಳ್ಳಲು ಆರಂಭಿಸುತ್ತಾರೆ’ ಎಂದು ಪೀಠ ಹೇಳಿತು.

ಕಲ್ಕತ್ತಾ ಆಸ್ಪತ್ರೆಯ ವೈದ್ಯರ ತಂಡ ಕರ್ಣನ್‌ ಅವರ ಮಾನಸಿಕ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಪೀಠ ಸೂಚಿಸಿತು.
ಗುರುವಾರದೊಳಗೆ ತಪಾಸಣೆ ನಡೆಯಬೇಕು. ತಪಾಸಣೆ ನಡೆಸಲು ವೈದ್ಯರ ಸಮಿತಿಗೆ ನೆರವಾಗಲು ಪೊಲೀಸ್‌ ತಂಡವೊಂದನ್ನು ರೂಪಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್‌ ಮಹಾ ನಿರ್ದೇಶಕರಿಗೆ ಪೀಠ ಸೂಚಿಸಿದೆ.

ಇದೇ 8ರೊಳಗೆ ವರದಿ ಸುಪ್ರೀಂ ಕೋರ್ಟ್‌ಗೆ ತಲುಪಬೇಕು. ನಂತರ ಕರ್ಣನ್‌ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಪ್ರೇರಣೆಯಿಂದ ದಾಖಲಿಸಿಕೊಂ
ಡಿರುವ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ನಡೆಯಲಿದೆ.

ಕರ್ಣನ್‌ ಅವರು ನ್ಯಾಯಮೂರ್ತಿಯಾಗಿ ಹೊಂದಿದ್ದ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಫೆ.8ರ ನಂತರ ಕರ್ಣನ್‌ ಅವರು ತೆಗೆದುಕೊಂಡ ನಿರ್ಧಾರ ಅಥವಾ ಆದೇಶವನ್ನು ದೇಶದ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಮತ್ತು ಆಯೋಗಗಳು ಪಾಲಿಸಬಾರದು ಎಂದು ಪೀಠ ತಿಳಿಸಿದೆ.

ಕರ್ಣನ್‌ ತಿರುಗೇಟು
‘ಪೀಠದಲ್ಲಿದ್ದ ಏಳೂ ನ್ಯಾಯಮೂರ್ತಿಗಳನ್ನು ದೆಹಲಿಯ ಏಮ್ಸ್‌ನಲ್ಲಿರುವ ಮಾನಸಿಕ ಆರೋಗ್ಯ ಮಂಡಳಿಗೆ ತಲುಪಿಸುವಂತೆ ದೆಹಲಿಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಆದೇಶ ನೀಡುತ್ತಿದ್ದೇನೆ. ಈ ಎಲ್ಲರ ಮಾನಸಿಕ ಆರೋಗ್ಯ ತಪಾಸಣೆ ನಡೆಸಿ ಇದೇ 7ರೊಳಗೆ ವರದಿ ಸಲ್ಲಿಸಬೇಕು’ ಎಂಬ ಆದೇಶವನ್ನು ಕರ್ಣನ್‌ ಹೊರಡಿಸಿದ್ದಾರೆ.
ಅವರು ಸಹಿ ಮಾಡಿರುವ ಈ ಆದೇಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದೂ ಕರ್ಣನ್‌ ಸೂಚಿಸಿದ್ದಾರೆ.
*
ನನ್ನ ಮಾನಸಿಕ ಸ್ಥಿಮಿತ ಪರೀಕ್ಷೆಗೆ ನೀಡಿರುವ ಕಿರುಕುಳದ ಆದೇಶ ಆರೋಗ್ಯಕರವಾಗಿರುವ ಪ್ರಾಮಾಣಿಕ ದಲಿತ ನ್ಯಾಯಮೂರ್ತಿಗೆ ಮಾಡಿದ ಅವಮಾನ.
ನ್ಯಾಯಮೂರ್ತಿ ಕರ್ಣನ್‌

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...