ಬೆಂಗಳೂರು: ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್ ಆಯ್ಕೆ ಬಹುತೇಕ ಖಚಿತವಾಗಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಹಾಗೂ ಕೇಂದ್ರ ಸರ್ಕಾರಿ ನೌಕರರ ತತ್ಸಮಾನ ವೇತನ ನೀಡುವಂತೆ ನೌಕರರ ಸಂಘಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ 2017-18ನೇ ಸಾಲಿನ ಬಜೆಟ್ನಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ಭರವಸೆ ನೀಡಿತ್ತು.
ಈಗ ಸರ್ಕಾರದ ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ. ಜೈರಾಜ್ ಹಾಗೂ ಮದನ್ಗೋಪಾಲ್ ಹೆಸರನ್ನು ಶಿಫಾರಸು ಮಾಡಿ ಮುಖ್ಯಮಂತ್ರಿಗಳಿಗೆ ಹಣಕಾಸು ಇಲಾಖೆ ಕಡತ ರವಾನಿಸಿದೆ. ಕೆ. ಜೈರಾಜ್ ಹೆಸರು ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ನೌಕರರ ಮುಷ್ಕರ ಇಲ್ಲ: ಬೆಂಗಳೂರು: ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವ ಕುರಿತು ಮುಖ್ಯಮಂತ್ರಿಗಳು ಪ್ರಸ್ತಾವನೆಗೆ ಅನುಮೋದನೆ ಸಲ್ಲಿಸಿದ್ದರೂ ಕೆಲವರು ಪ್ರಚಾರಕ್ಕಾಗಿ ಮುಷ್ಕರಕ್ಕೆ ಕರೆ ನೀಡಿರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ತಿಳಿಸಿದ್ದಾರೆ.
ನಿವೃತ್ತ ನೌಕರರ ಮುಷ್ಕರಕ್ಕೆ ಬೆಂಬಲವಿಲ್ಲ: 7ನೇ ವೇತನ ಆಯೋಗಕ್ಕೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಮೇ 4ರಂದು ನಿವೃತ್ತ ನೌಕರರು ನಡೆಸುವ ನಿರಶನಕ್ಕೆ ಬೆಂಬಲವಿಲ್ಲ ಎಂದು ಸಚಿವಾಲಯ ನೌಕರರ ಸಂಘದ ಉಪಾಧ್ಯಕ್ಷ ರಮೇಶ್ ಸಂಗಂ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಯು.ಡಿ. ನರಸಿಂಹಯ್ಯ ತಿಳಿಸಿದ್ದಾರೆ.
No comments:
Post a Comment