ನವದೆಹಲಿ/ಬೀಜಿಂಗ್: ಚೀನಾವು ಭಾನುವಾರ ಸಂಘಟಿಸಿರುವ ಮಹತ್ವಾಕಾಂಕ್ಷೆಯ ‘ಒಂದು ವಲಯ, ಒಂದು ರಸ್ತೆ’ (ಒಬೋರ್) ಶೃಂಗಸಭೆಯನ್ನು ಬಹಿಷ್ಕರಿಸುವ ಮೂಲಕ ತನ್ನ ಸಾರ್ವಭೌಮತ್ವದ ಮೇಲಿನ ಹಸ್ತಕ್ಷೇಪವನ್ನು ಸಹಿಸಲು ಸಾಧ್ಯವಿಲ್ಲ ಎಂಬ ಪ್ರಬಲ ಸಂದೇಶವನ್ನು ಚೀನಾಕ್ಕೆ ನೀಡಲು ಭಾರತ ಸನ್ನದ್ಧವಾಗಿದೆ.
ಬಂದರು, ರೈಲುಮಾರ್ಗ ಮತ್ತು ರಸ್ತೆಗಳನ್ನು ಸಂರ್ಪಸುವ ಚೀನಾದ ಬೃಹತ್ ಯೋಜನೆಗೆ ಸಂಬಂಧಿಸಿದ ಶೃಂಗಸಭೆಯಲ್ಲಿ 29 ರಾಷ್ಟ್ರಗಳ ನಾಯಕರು ಹಾಗೂ ಇತರ ರಾಷ್ಟ್ರಗಳ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದರೂ, ತಾನು ಭಾಗವಹಿಸುವ ಅಥವಾ ಭಾಗವಹಿಸದ ಬಗ್ಗೆ ಭಾರತ ಅಧಿಕೃತ ಸಂದೇಶವನ್ನು ಚೀನಾಕ್ಕೆ ಕಳುಹಿಸಿಲ್ಲ.
ಅಮೆರಿಕ, ಜಪಾನ್, ದಕ್ಷಿಣ ಕೊರಿಯ, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳು ಶೃಂಗದಲ್ಲಿ ಪಾಲ್ಗೊಳ್ಳಲಿವೆ. ಪಾಕಿಸ್ತಾನದಿಂದ ಸ್ವತಃ ಪ್ರಧಾನಿ ನವಾಜ್ ಷರೀಫ್ ಅವರೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಶುಕ್ರವಾರವೇ ಬೀಜಿಂಗ್ಗೆ ತೆರಳಿದ್ದಾರೆ. –ಏಜೆನ್ಸೀಸ್
ಭಾರತದ ವಿರೋಧವೇಕೆ?
ಚೀನಾದ ಒಂದು ವಲಯ, ಒಂದು ರಸ್ತೆ ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿರ್ವಿುಸಲು ಉದ್ದೇಶಿಸಲಾಗಿದೆ. 46 ಶತಕೋಟಿ ಡಾಲರ್ ವೆಚ್ಚದ ಈ ಆರ್ಥಿಕ ಕಾರಿಡಾರ್, ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನದ ಭಾಗವಲ್ಲ ಎಂಬುದಾಗಿ ಸ್ಪಷ್ಟವಾಗಿ ಸಾರಿರುವ ಭಾರತ, ಇದೇ ಹಿನ್ನೆಲೆಯಲ್ಲಿ ಈ ಯೋಜನೆಗೆ ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇದಲ್ಲದೆ ಪರಮಾಣು ಪೂರೈಕೆದಾರರ ಸಮೂಹಕ್ಕೆ (ಎನ್ಎಸ್ಜಿ) ಸೇರುವ ಯತ್ನ, ಪಾಕಿಸ್ತಾನಿ ಭಯೋತ್ಪಾದಕ ಗುಂಪು ಜೈಷ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ಗೆ ವಿಶ್ವಸಂಸ್ಥೆಯಲ್ಲಿ ನಿಷೇಧ ವಿಧಿಸುವ ಪ್ರಸ್ತಾಪ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸೇರುವ ಯತ್ನಗಳಿಗೆ ವಿರೋಧ ವ್ಯಕ್ತ ಪಡಿಸಿರುವ ಚೀನಾದ ನಿಲುವು ಕೂಡಾ ಭಾರತಕ್ಕೆ ತೀವ್ರ ಕಿರಿಕಿರಿ ಉಂಟು ಮಾಡಿದೆ.
ಚೀನಾ ಏನು ಹೇಳುತ್ತದೆ?
ಚೀನಾ, ಭಾರತ, ಪಾಕಿಸ್ತಾನ ಸೇರಿದಂತೆ ಪ್ರದೇಶದ ಎಲ್ಲ ರಾಷ್ಟ್ರಗಳಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ. ಯಾವುದೇ ರಾಷ್ಟ್ರದ ಸಾರ್ವಭೌಮತ್ವದ ವಿಚಾರದಲ್ಲಿ ಕೈಹಾಕುವುದಿಲ್ಲ. ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹೆಸರು ಬದಲಿಸಲೂ ಚೀನಾ ಸಿದ್ಧವಿದೆ ಎಂದು ಲುವೊ ಹೇಳಿದ್ದಾರೆ.
ಏನಿದು ಯೋಜನೆ?
ಚೀನಾದಿಂದ ಯುರೋಪಿನವರೆಗಿನ ಎಲ್ಲ ರಸ್ತೆಗಳು, ರೈಲು ಮಾರ್ಗಗಳು ಬಂದರುಗಳನ್ನು ಸಂರ್ಪಸುವ ಮೂಲಕ ಮೂಲ ಸವಲತ್ತು ಕಲ್ಪಿಸುವ ಯೋಜನೆ ಇದು. ಶತಕೋಟಿ ಡಾಲರ್ ವೆಚ್ಚದ ಈ ಯೋಜನೆ ಮೂಲಕ ಭಾರತದ ನೆರೆಹೊರೆ ದೇಶಗಳೂ ಸೇರಿದಂತೆ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಗಟ್ಟಿಗೊಳಿಸಲು ಚೀನಾಕ್ಕೆ ಸಾಧ್ಯವಾಗಲಿದೆ. ಈ ಯೋಜನೆ ಮೂಲಕ ಏಷ್ಯಾ ಮತ್ತು ಆಫ್ರಿಕಾ ಮಧ್ಯೆ ಪ್ರಾದೇಶಿಕ ಸಂಪರ್ಕ ಕಲ್ಪಿಸುವ ಉದ್ದೇಶವನ್ನೂ ಚೀನಾ ಹೊಂದಿದೆ.
ಅಮೆರಿಕವನ್ನು ಸೆಳೆದ ಚೀನಾ
ತನ್ನ ‘ಸಿಲ್ಕ್ ರೋಡ್ ಶೃಂಗ’ಕ್ಕೆ ಅಮೆರಿಕವನ್ನು ಎಳೆದುಕೊಳ್ಳುವಲ್ಲಿ ಚೀನಾ ಕಡೆಗಳಿಗೆಯಲ್ಲಿ ಸಫಲವಾಗಿದೆ. ಅದೇ ರೀತಿ ದಕ್ಷಿಣ ಕೊರಿಯ, ಯುರೋಪಿಯನ್ ಯೂನಿಯನ್ (ಇಯು) ಮತ್ತು ಜಪಾನನ್ನೂ ಶೃಂಗದಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸಿದೆ. ಅಮೆರಿಕದ ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಪೂರ್ವ ಏಷ್ಯಾ ಹಿರಿಯ ನಿರ್ದೇಶಕ ಮ್ಯಾಟ್ ಪೊಟಿಂಗರ್ ಅವರು ಶೃಂಗಸಭೆಯಲ್ಲಿ ಭಾಗವಹಿಸುವ ನಿಯೋಗದ ನೇತೃತ್ವ ವಹಿಸುವರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪ್ರಕಟಿಸಿದೆ. ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ನೇಪಾಳದ ಉಪಪ್ರಧಾನಿ ಮತ್ತು ವಿತ್ತ ಸಚಿವ ಕೃಷ್ಣ ಬಹಾದುರ್ ಮಹರಾ ಅವರೂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
No comments:
Post a Comment