ಒಮ್ಮೆ ನಾನೂ ನನ್ನಕ್ಕನೂ 1965ರ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಮಾತಾಡುತ್ತಿದ್ದಾಗ, ಯುದ್ಧದ ದಿನಗಳಲ್ಲಿ ದೆಹಲಿಯಲ್ಲಿ ಸೀಮೆಎಣ್ಣೆಯೂ ಸಿಗದೇ ಪರದಾಡಿದ್ದನ್ನು ಅಕ್ಕ ನೆನಪಿಸಿಕೊಂಡು ಹೇಳಿದಳು. ಮಾತು ಹಾಗೇ ಭಾರತ-ಚೀನಾ ವೈಮನಸ್ಯದ ಕಡೆ ತಿರುಗಿ, ‘…ಹಿಮಾಲಯ ಪರ್ವತಗಳು ಇಲ್ಲದಿದ್ದರೆ ನಮಗೆ ಕಷ್ಟವಾಗಿಬಿಡುತ್ತಿತ್ತು ಅಲ್ಲವಾ?’ ಅಂದೆ ನಾನು. ‘ಕಷ್ಟ ಆಗ್ತಿತ್ತು ಅನಿಸುತ್ತೆ, ನಮ್ಮ ಹೆಸರುಗಳೆಲ್ಲಾ ಚಿಂಗ್ ಪಿಂಗ್ ತೆಂಗ್ ಡೆಂಗ್ ಅಂತಾಗಿಬಿಡುತ್ತಿದ್ದವೇನೋ’ ಅಂದಳು ಅಕ್ಕ ನಗುತ್ತಾ.
ಈ ಮಾತುಗಳಾಗಿ ನಲವತ್ತು ವರ್ಷಗಳೇ ಆಗುತ್ತಿವೆ. ಈ ನಾಲ್ಕು ದಶಕಗಳಲ್ಲಿ ಹಿಮಾಲಯ ಪರ್ವತ ಹಿಂದಿನಂತೆಯೇ ಜಗ್ಗದೇ, ಕುಗ್ಗದೇ ನಿಂತೇ ಇದೆ. ಇನ್ನು ಮುಂದೆಯೂ ಇರುತ್ತದೆ. ಹೀಗಾಗಿ ನಮ್ಮ ಹೆಸರುಗಳು ಚಿಂಗ್, ಪಿಂಗ್… ಅಂತೆಲ್ಲಾ ಕುಲಗೆಟ್ಟುಹೋಗದೇ ನಮ್ಮವೇ ಆಗುಳಿಯುತ್ತವೆ. ಭೂವಿಜ್ಞಾನಿಗಳ ಪ್ರಕಾರ ಹಿಮಾಲಯ ಪರ್ವತ ವರ್ಷಕ್ಕೆ ಆರರಿಂದ ಎಂಟು ಸೆಂಟಿಮೀಟರುಗಳಷ್ಟು ಎತ್ತರಕ್ಕೆ ಬೆಳೆಯುತ್ತಿದೆಯಂತೆ. ಹೀಗಾಗಿ ನಮ್ಮ ಹೆಸರುಗಳ ಸುರಕ್ಷತೆ ವರ್ಷವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ!
ಚೀನಿಯರ ವಿಸ್ತರಣವಾದಿ ಮನೋಭಾವ: ಹೌದು, ಹ್ವಾಂಗ್ಹೋ ಹಾಗೂ ಯಾಂಗ್ಟ್ಝೆ ನದಿಗಳ ನಡುವೆ ನಾಲ್ಕು ಸಾವಿರ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ‘ಝಾಂಗ್ಗ್ವೋ’ (Chinese Middle Kingdom) ಅನತಿಕಾಲದಲ್ಲೇ ಚೀನೀ ಸಾಮ್ರಾಜ್ಯವಾದವಾಗಿ ಮಾರ್ಪಟ್ಟು ಮುಂದಿನ ಮೂರು ಸಹಸ್ರಮಾನಗಳಲ್ಲಿ ದಿಕ್ಕುದಿಕ್ಕುಗಳಿಗೆ ವಿಸ್ತರಿಸಿತು. ಪೂರ್ವದಲ್ಲಿ ಪೆಸಿಫಿಕ್ ಸಾಗರ, ಪಶ್ಚಿಮದಲ್ಲಿ ತಕ್ಲ ಮಕಾನ್ ಮರುಭೂಮಿ, ಉತ್ತರದಲ್ಲಿ ಗೋಬಿ ಮರುಭೂಮಿ ಹಾಗೂ ದಕ್ಷಿಣದಲ್ಲಿ ಹಿಮಾಲಯ ಪರ್ವತಗಳ ತಡೆ ಇಲ್ಲದಿದ್ದಲ್ಲಿ ವಿಸ್ತರಣವಾದಿ ಮನೋಭಾವದ ಚೀನೀ ಹ್ಯಾನ್ ಜನಾಂಗ ತಮ್ಮ ದೇಶವನ್ನು ಅದೆಷ್ಟು ವಿಸ್ತರಿಸುತ್ತಿದ್ದರೆಂದು ಊಹಿಸುವುದು ಕಷ್ಟ. ಹಿಮಾಲಯದ ಬಗ್ಗೇ ಪ್ರತ್ಯೇಕವಾಗಿ ಹೇಳುವುದಾದರೆ ಹತ್ತನೆಯ ಶತಮಾನದಲ್ಲೊಮ್ಮೆ ಚೀನೀ ಸೇನೆ ಹಿಮಾಚಲ ಪ್ರದೇಶಕ್ಕೆ ಬಂದದ್ದನ್ನೂ, ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಸಿಖ್ ಸೇನೆ ಒಮ್ಮೆ ಟಿಬೆಟ್ಗೆ ನುಗ್ಗಿದ್ದನ್ನೂ ಹೊರತುಪಡಿಸಿದರೆ ಉಲ್ಲೇಖಿಸಬಹುದಾದಂತಹ ಪರ್ವತದ ಉಲ್ಲಂಘನೆ ಎರಡೂ ಕಡೆಗಳಿಂದಲೂ ಇತಿಹಾಸದಲ್ಲಿ ಮತ್ತೆಂದೂ ಆಗಲಿಲ್ಲ. ಜಗತ್ತಿನ ಅತಿ ಎತ್ತರದ ಈ ಪರ್ವತಗಳನ್ನು ದಾಟಿ ಸಿಂಧೂ ಗಂಗಾ ಬಯಲಿಗೆ ಕಾಲಿಡುವ ಯೋಚನೆಯನ್ನು ಚೀನಿಯರು ಎಂದೂ ಮಾಡಲಿಲ್ಲ.
ಹಿಮಾಲಯದ ಅಭೇದ್ಯತೆಯನ್ನು ಚೀನೀಯರು ಅರಿತಂತೆಯೇ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಬ್ರಿಟಿಷರೂ ಆ ಮಹೋನ್ನತ ಪರ್ವತಶ್ರೇಣಿಗಳ ಅಭೇದ್ಯತೆಯನ್ನು ಮಾನ್ಯ ಮಾಡಿ ತಮ್ಮ ಅಧಿಕಾರವನ್ನು ಭಾರತದ ಭೌಗೋಳಿಕ ಎಲ್ಲೆಯೊಳಗಷ್ಟೇ ಸೀಮಿತಗೊಳಿಸಿದರು. ನಂತರದ ಕಾಲದಲ್ಲಿ ಹಿಮಾಲಯದ ಅಗಾಧತೆ ಹಾಗೂ ಅಭೇದ್ಯತೆಯನ್ನು ಚೀನೀ ಕಮ್ಯೂನಿಸ್ಟರೂ ಅರ್ಥಮಾಡಿಕೊಂಡರು. ಹೀಗಾಗಿಯೇ ಅವರು ಹಿಮಾಲಯದ ದಕ್ಷಿಣಕ್ಕಿರುವ ಅರುಣಾಚಲ ಪ್ರದೇಶವನ್ನು ಭಾರತದ ಭಾಗವೆಂದು ಒಪ್ಪಿಕೊಳ್ಳಲು ಹಿಂದೆಮುಂದೆ ನೋಡದೇ ತಯಾರಾದದ್ದು. ಅರುಣಾಚಲವನ್ನು ಟಿಬೆಟ್ನಿಂದ ಪ್ರತ್ಯೇಕಿಸುವ ಉನ್ನತ ಹಿಮಾಲಯ ಪರ್ವತಗಳು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗಿ ಎರಡೂ ಪ್ರದೇಶಗಳ ನಡುವೆ ಸಂಪರ್ಕವನ್ನು ಕತ್ತರಿಸುತ್ತವೆ. ಈ ಕಾರಣದಿಂದಾಗಿಯೇ ಚಳಿಗಾಲದಲ್ಲಿ ಅರುಣಾಚಲದ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸುವುದು ಸಾಧ್ಯವಿಲ್ಲ ಎಂದು ಚಾಣಾಕ್ಷ ಚೀನೀ ಕಮ್ಯೂನಿಸ್ಟ್ ನೇತಾರರು ಸ್ಪಷ್ಟವಾಗಿ ಅರಿತುಕೊಂಡದ್ದು. ಹೀಗಾಗಿಯೇ ಅರುಣಾಚಲದ ಮೇಲೆ ಚೀನಾಗೆ ಐತಿಹಾಸಿಕ ಹಕ್ಕಿದ್ದರೂ ಭೌಗೋಳಿಕ ವಾಸ್ತವವನ್ನು ಒಪ್ಪಿಕೊಂಡು ಆ ಪ್ರದೇಶವನ್ನು ಭಾರತದಲ್ಲೇ ಬಿಡಲು ಅವರು ಮನಸ್ಸು ಮಾಡಿದರು. 1962ರ ಯುದ್ಧದಲ್ಲಿ ಚೀನೀ ಸೇನೆ ಹಿಮಾಲಯವನ್ನು ದಾಟಿ ಅರುಣಾಚಲದಲ್ಲಿ ದಕ್ಷಿಣಕ್ಕೆ ಬಹುದೂರ ಸಾಗಿ ಬಂದು ಬ್ರಹ್ಮಪುತ್ರಾ ನದಿಗೆ ಕೇವಲ ಎಂಬತ್ತು ಕಿಲೋಮೀಟರ್ಗಳಷ್ಟು ಹತ್ತಿರದ, ಬೊಂಡಿಲಾವನ್ನು ಆಕ್ರಮಿಸಿಕೊಂಡಿತ್ತು. ಆದರೆ ಚೀನೀಯರು ಏಕಾಏಕಿ ಕದನವಿರಾಮ ಘೊಷಿಸಿ ಆಕ್ರಮಿಸಿಕೊಂಡಿದ್ದ ಎಲ್ಲ ಪ್ರದೇಶಗಳನ್ನೂ ಭಾರತಕ್ಕೇ ಬಿಟ್ಟುಕೊಟ್ಟು ಹಿಂದಕ್ಕೆ ಹೊರಟುಹೋದರು. ಮೇಲೆ ಹೇಳಿದಂತೆ ಚಳಿಗಾಲದಲ್ಲಿ ಹಿಮಾಲಯದ ದಕ್ಷಿಣದ ಪ್ರದೇಶಗಳ ಮೇಲೆ ಹತೋಟಿ ಮುಂದುವರಿಸುವುದು ಸಾಧ್ಯವಿಲ್ಲವೆಂಬ ವಾಸ್ತವವನ್ನು ಚೆನ್ನಾಗಿ ಅರಿತಿದ್ದ ಚೀನೀಯರು ಚಳಿಗಾಲ ಆರಂಭವಾಗುವ ಮುನ್ನವೇ ನವೆಂಬರ್ 20ರಂದು ಯುದ್ಧ ಮುಗಿಸಿ ಹಿಮಾಲಯವನ್ನು ದಾಟಿ ತಮ್ಮ ನೆಲಕ್ಕೆ ಹಿಂತಿರುಗಿಬಿಡುವುದು ಕ್ಷೇಮವೆಂದು ರ್ತಸಿದರು. ನವೆಂಬರ್ ಕೊನೆಯವಾರದ ನಂತರವೂ ಚೀನೀ ಸೈನಿಕರು ಅರುಣಾಚಲದಲ್ಲೇ ಉಳಿದಿದ್ದರೆ ಹಿಮಾಲಯದ ಕಣಿವೆಗಳು ಹಿಮದಿಂದ ಮುಚ್ಚಿಹೋಗುತ್ತಿದ್ದಂತೇ ಚೀನಾ ಜತೆ ಅವರ ಸಂಪರ್ಕ ಕತ್ತರಿಸಿಹೋಗಿಬಿಡುತ್ತಿತ್ತು. ಆಹಾರ, ಮದ್ದುಗುಂಡುಗಳ ಪೂರೈಕೆ ನಿಂತುಹೋಗಿ ಕಂಗೆಟ್ಟ ಅವರನ್ನು ಭಾರತೀಯ ಸೇನೆ ನಿರಾಯಾಸವಾಗಿ ಹೊಸಕಿಹಾಕಿಬಿಡಬಹುದಾಗಿತ್ತು. ಅಂದರೆ, ತಮ್ಮ ವಿಜಯ ಶೀಘ್ರದಲ್ಲೇ ಹೀನಾಯ ಸೋಲಾಗಿ ಪರಿವರ್ತಿತವಾಗುವ ಅಪಾಯವನ್ನು ಮನಗಂಡಿದ್ದ ಚೀನೀಯರು ಪಶ್ಚಿಮ ವಲಯದ ಅಕ್ಸಾಯ್ ಚಿನ್ನಲ್ಲಿ ತಮಗೆ ಬೇಕಾದಷ್ಟು ಪ್ರದೇಶ ಸಿಕ್ಕಿದೊಡನೇ ಪೂರ್ವ ವಲಯದ ಅರುಣಾಚಲವನ್ನು ಇಡಿಯಾಗಿ ಭಾರತಕ್ಕೆ ಬಿಟ್ಟುಕೊಟ್ಟು ಹೊರಟುಹೋದರು. ಅಂದರೆ ಅವರು ತಮಗೆ ಬೇಕಾದೆಡೆ, ಬೇಕಾದ ಸಮಯದಲ್ಲಿ, ಬೇಕಾದಷ್ಟು ಮಾತ್ರ ಯುದ್ಧ ಮಾಡುವ ರಣತಂತ್ರ ರೂಪಿಸಿಕೊಂಡಿದ್ದರು. ದುರದೃಷ್ಟವಶಾತ್ ಅಂತಹ ಚಾಣಾಕ್ಷತೆ, ವಾಸ್ತವಪ್ರಜ್ಞೆ ಭಾರತೀಯ ಪ್ರಧಾನಿ ನೆಹರೂ ಅವರಲ್ಲಿ ಕಂಡುಬರಲಿಲ್ಲ. ಭೌಗೋಳಿಕವಾಗಿ ಅಕ್ಸಾಯ್ ಚಿನ್ ಪ್ರದೇಶ ಅರುಣಾಚಲದ ಪ್ರತಿಬಿಂಬ. ಭಾರತ ಮತ್ತು ಅಕ್ಸಾಯ್ ಚಿನ್ ಪ್ರಸ್ಥಭೂಮಿಯನ್ನು ವಿಶ್ವದಲ್ಲೇ ಎರಡನೆಯ ಅತಿ ಎತ್ತರದ ಪರ್ವತಶ್ರೇಣಿಯಾದ ಕಾರಾಕೊರಂ ಪರ್ವತಗಳು ಪ್ರತ್ಯೇಕಿಸುತ್ತವೆ. ಈ ಪರ್ವತಶ್ರೇಣಿಗಳು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗುತ್ತವೆ. ಒಂದುವೇಳೆ ಅಕ್ಸಾಯ್ ಚಿನ್ ಭಾರತದ ಭಾಗವಾದರೂ ಚಳಿಗಾಲದಲ್ಲಿ ಆದರ ಜತೆ ನಮಗೆ ಸಂಪರ್ಕವಿರುವುದಿಲ್ಲ. ಇದರ ಅರ್ಥವೇನೆಂದರೆ ಹಿಂದೆಂದೂ ನಮ್ಮದಾಗಿಲ್ಲದ, ನಮ್ಮದಾದರೂ ಚಳಿಗಾಲದಲ್ಲಿ ನಾವು ಆಡಳಿತ ನಡೆಸಲಾಗದ ಅಕ್ಸಾಯ್ ಚಿನ್ ನಮಗೆ ಬೇಕು ಎಂದು ನೆಹರೂ ಹಠ ಹಿಡಿದರು ಮತ್ತು ಅದನ್ನು ಒಪ್ಪಿಕೊಳ್ಳಿರೆಂದು ಚೀನೀಯರ ಮೇಲೆ ಒತ್ತಡ ಹೇರಿದರು.
ಅನಾಹುತವೇ ಹೆಚ್ಚು: ಅಂತಿಮವಾಗಿ, 1962ರ ಯುದ್ಧವನ್ನು ಚೀನಾ ನಿರ್ವಹಿಸಿದ ಬಗೆಯಿಂದ ಆದದ್ದೇನೆಂದರೆ ಹಿಮಾಲಯದಲ್ಲಿ ಎರಡೂ ದೇಶಗಳ ನಡುವೆ ಅಸ್ತಿತ್ವಕ್ಕೆ ಬಂದ ವಾಸ್ತವ ಹತೋಟಿ ರೇಖೆ ಮೊಂಡು ಅಲುಗಿನ ಗಡಿಯಾಯಿತು. ಅಂದರೆ ಇದು ಎರಡು ದೇಶಗಳಲ್ಲಿ ಯಾವೊಂದಕ್ಕೂ ಸಾಮರಿಕ ಅನುಕೂಲ ಒದಗಿಸುವುದಿಲ್ಲ. ಹೀಗಾಗಿ ಇದನ್ನು ಹೇಗಿದೆಯೋ ಹಾಗೆ ಇಟ್ಟುಕೊಳ್ಳುವುದು ಅಥವಾ ಅಲ್ಲಲ್ಲಿ ಅತಿಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಹೊರತಾಗಿ ಬೇರೆ ಸೂಕ್ತ ಮಾರ್ಗವಿಲ್ಲ. ಎರಡೂ ದೇಶಗಳಿಗೆ ರಕ್ಷಣೆಯ ದೃಷ್ಟಿಯಿಂದ ವೈಜ್ಞಾನಿಕ ಗಡಿರೇಖೆಯಂತಿರುವ ಈಗಿನ ಹತೋಟಿ ರೇಖೆಯನ್ನು ಅತಿಯಾಗಿ ಬದಲಾಯಿಸಿದರೆ ಅದರಿಂದ ಅನಾಹುತವೇ ಹೆಚ್ಚು. ಇದನ್ನು ಎರಡೂ ದೇಶಗಳು, ಮುಖ್ಯವಾಗಿ ಚೀನಾ, ಅರಿತಿರುವುದರಿಂದಲೇ ಆ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ಕಳೆದ ಐವತ್ತೈದು ವರ್ಷಗಳಲ್ಲಿ ಮತ್ತೊಂದು ಯುದ್ಧವಾಗಿಲ್ಲ, ಮುಂದೆ ಆಗುವುದೂ ಇಲ್ಲ. ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಭಾರತದ ಇನ್ನಾವುದೇ ಭೂಭಾಗವನ್ನು ಆಕ್ರಮಿಸಿಕೊಳ್ಳುವ ಇರಾದೆ ಚೀನಾಗೆ ಇಲ್ಲವೇ ಇಲ್ಲ.
ಹಾಗಿದ್ದರೆ ಹಿಂದೂ ಮಹಾಸಾಗರದಲ್ಲಿ ತನ್ನ ನೆಲೆಗಳನ್ನು ಚೀನಾ ಸ್ಥಾಪಿಸಿಕೊಂಡಿರುವುದೇಕೆ? ಸುಸಜ್ಜಿತ ವಿಮಾನವಾಹಕ ನೌಕಾಪಡೆಯನ್ನು ಇಲ್ಲಿ ನೆಲೆಗೊಳಿಸುವ ಉದ್ದೇಶವೇನು? ಚೀನಾ ತನ್ನ ಮೊಟ್ಟಮೊದಲ ವಿಮಾನವಾಹಕ ನೌಕೆಯನ್ನು 2012ರಲ್ಲಿ ಗಳಿಸಿಕೊಂಡಿತಷ್ಟೇ. ಚೀನೀ ಸರ್ಕಾರೀ ಸ್ವಾಮ್ಯದ ‘ಗ್ಲೋಬಲ್ ಟೈಮ್್ಸ’ ಪತ್ರಿಕೆ ಇದೇ ಮಾರ್ಚ್ನಲ್ಲಿ ವರದಿ ಮಾಡಿದಂತೆ ಟೈಪ್ ‘001ಎ’ ಎಂಬ ಹೆಸರಿನ ಎರಡನೆಯ ವಿಮಾನವಾಹಕ ನೌಕೆಯ ನಿರ್ಮಾಣ ಅಂತಿಮ ಹಂತದಲ್ಲಿದೆ ಹಾಗೂ ‘ಟೈಪ್ 002’ ಎಂಬ ಹೆಸರಿನ ಮತ್ತೊಂದು ವಿಮಾನವಾಹಕ ನೌಕೆಯ ನಿರ್ವಣವೂ ಜಾರಿಯಲ್ಲಿದೆ. ‘ಟೈಪ್ 002’ ನೌಕೆ ಬೃಹತ್ತಾಗಿರುವುದಷ್ಟೇ ಅಲ್ಲ, ಅತ್ಯಾಧುನಿಕ ಸಮರ ಸೌಲಭ್ಯಗಳನ್ನೂ ಹೊಂದಿರುತ್ತದೆ. ಇಲ್ಲಿ, ಪತ್ರಿಕಾವರದಿಯಲ್ಲಿನ ಮತ್ತೊಂದು ಅಂಶ ಗಮನ ಸೆಳೆಯುತ್ತದೆ. ಅದರ ಪ್ರಕಾರ ಉಚ್ಚಸ್ತರೀಯ ಚೀನಿ ರಕ್ಷಣಾ ಅಧಿಕಾರಿಯೊಬ್ಬರು ಹೀಗೆ ಹೇಳಿದ್ದಾರೆ: ‘ಚೀನಾಗೆ ಎರಡು ವಿಮಾನವಾಹಕ ನೌಕಾಪಡೆಗಳ ಅಗತ್ಯವಿದೆ, ಒಂದು ಪೆಸಿಫಿಕ್ ವಲಯದಲ್ಲಿ, ಮತ್ತೊಂದು ಹಿಂದೂ ಮಹಾಸಾಗರ ವಲಯದಲ್ಲಿ. ಆದ್ದರಿಂದ ನಮಗೆ ಐದು ಅಥವಾ ಆರು ವಿಮಾನವಾಹಕ ನೌಕೆಗಳು ಬೇಕಾಗಿವೆ.’
ಹತೋಟಿ ಸ್ಥಾಪನೆಗೆ ಅವಕಾಶವಿಲ್ಲ: ಇದೆಲ್ಲವೂ ಹೇಳುವುದು ಪ್ರಪಂಚದ ಎರಡನೆಯ ಅತಿ ದೊಡ್ಡ ನೌಕಾಸೇನೆಯಾಗುವ ಹಾದಿಯಲ್ಲಿ ಚೀನೀ ನೌಕಾಸೇನೆ ದಾಪುಗಾಲಿಡುತ್ತಿದೆ ಎನ್ನುವುದನ್ನು. ಈ ನೌಕಾಸೇನೆಯ ಅರ್ಧ ಭಾಗ ಹಿಂದೂ ಮಹಾಸಾಗರ ವಲಯದಲ್ಲಿ ಕಾರ್ಯನಿರತವಾಗಲಿದೆ ಎನ್ನುವುದು ನಮಗಿಲ್ಲಿ ಮುಖ್ಯವಾಗುತ್ತದೆ. ಭಾರತದ ಸಾಗರ ತೀರದ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಉದ್ದೇಶ ಚೀನಾಗಿದೆಯೇ? ಹಾಗೇನೂ ಇಲ್ಲ. ಯಾಕೆಂದರೆ, ಸಾಗರ ಯುದ್ಧದಲ್ಲೂ ಭಾರತವನ್ನು ಚೀನಾ ಮಣಿಸಿದರೂ ಭಾರತದ ಸಾಗರ ತೀರದ ಪ್ರದೇಶಗಳ ಮೇಲೆ ತನ್ನ ಹತೋಟಿ ಸ್ಥಾಪಿಸಲು ಅಂತಾರಾಷ್ಟ್ರೀಯ ವ್ಯವಸ್ಥೆ ಅವಕಾಶ ಮಾಡಿಕೊಡುವುದಿಲ್ಲ. ಅಷ್ಟೇ, ಅಲ್ಲ, ತಮ್ಮ ನೆಲಕ್ಕೆ ನೇರ, ಸರಾಗ ಭೂಸಂಪರ್ಕ ಇಲ್ಲದ ಭಾರತೀಯ ಪ್ರದೇಶಗಳಲ್ಲಿ ಆಡಳಿತ ನಡೆಸುವುದು ತಮ್ಮಿಂದಾಗದು ಎಂದು ಚೀನೀಯರಿಗೆ ಗೊತ್ತು. ಅಂತಹ ವಿವೇಕವನ್ನು ಅವರು ಅರುಣಾಚಲ ಪ್ರದೇಶವನ್ನು ಭಾರತಕ್ಕೇ ಬಿಟ್ಟುಕೊಟ್ಟು ಪ್ರದರ್ಶಿಸಿದ್ದಾರೆ.
ನಾವು ಚೀನಾವನ್ನು ನಮ್ಮ ಪ್ರತಿಸ್ಪರ್ಧಿ ಎಂದು ಭಾವಿಸಿದ್ದರೆ ಚೀನೀ ನಾಯಕರು ಭಾರತವನ್ನು ಹಾಗೇನೂ ತೆಗೆದುಕೊಳ್ಳುತ್ತಿಲ್ಲ. ಉದ್ಧಟತನದಂತೆ ಕಂಡರೂ ಚೀನೀ ಸಾಮರಿಕ ತಜ್ಞರು ಹೇಳುವುದು ಸೇನೆ ಮತ್ತು ಅರ್ಥವ್ಯವಸ್ಥೆಯ ಮಾನದಂಡದಲ್ಲಿ ಭಾರತ ಚೀನಾಗೆ ಎಂದೂ ಸರಿಸಮ ಆಗಲಾರದು, ಭಾರತ ಈ ವಾಸ್ತವವನ್ನು ಅರ್ಥಮಾಡಿಕೊಂಡು, ಚೀನಾಗಿಂತ ಒಂದು ಹಂತ ಕೆಳಗಿನ ಸ್ಥಾನವನ್ನು ಒಪ್ಪಿಕೊಂಡು ‘ಬಡವಾ ನೀ ಮಡಗಿದ ಹಾಗಿರು’ ಎನ್ನುವಂತಿರಬೇಕು! ಇಷ್ಟಾಗಿಯೂ, ಸೂಪರ್ಪವರ್ ಸ್ಥಾನಕ್ಕಾಗಿ ಮುಂದೊಂದು ದಿನ ತಾನು ಅಮೆರಿಕಾ ಜತೆ ಸೆಣಸಬೇಕಾಗುತ್ತದೆಂದೂ, ಹಾಗೂ ಅದಕ್ಕಾಗಿ ತಕ್ಕ ತಯಾರಿಯನ್ನು ಭರದಿಂದ ಮಾಡಿಕೊಳ್ಳುತ್ತಿರುವ ಚೀನಾ ತನ್ನ ಹಾದಿಯಲ್ಲಿ ಮೊದಲು ಪಕ್ಕಕ್ಕೆ ಸರಿಸಬೇಕಾದ ಮುಳ್ಳು ಭಾರತ ಎಂದು ಭಾವಿಸಿದೆ. ಒಂದರ್ಥದಲ್ಲಿ, 1866-1914ರ ಅವಧಿಯಲ್ಲಿ ಫ್ರಾನ್ಸ್ ವಿರುದ್ಧ ಏಕೀಕೃತ ಜರ್ಮನಿ ಅನುಸರಿಸಿದ ನೀತಿಯಂತಿದೆ ಇದು. ಯೂರೋಪಿನಾಚೆ ಹಾರಬೇಕಾದರೆ ಮೊದಲು ಯೂರೋಪಿನ ಮುಖ್ಯ ಭೂಭಾಗದಲ್ಲಿ ಫ್ರಾನ್ಸನ್ನು ನಿರ್ವೀರ್ಯಗೊಳಿಸಬೇಕು ಎಂದು ಭಾವಿಸಿ ಅದರಂತೇ ತನ್ನ ನೀತಿಗಳನ್ನು ಜರ್ಮನಿ ರೂಪಿಸಿಕೊಂಡದ್ದಕ್ಕೆ ಭಾರತದ ಬಗ್ಗೆ ಚೀನಾ ತೋರುತ್ತಿರುವ ನಿಲುವನ್ನು ಹೋಲಿಸಬಹುದು. ಏಷ್ಯಾದಲ್ಲಿ ಮೊದಲು ಭಾರತವನ್ನು ನಿರ್ವೀರ್ಯಗೊಳಿಸಿ ನಂತರ ವಿಶ್ವರಂಗಕ್ಕೆ ಜಿಗಿದು ಅಮೆರಿಕಾಗೆ ಸೆಡ್ಡು ಹೊಡೆಯಬೇಕು ಎನ್ನುವುದು ಚೀನಾದ ದೂರಗಾಮಿ ಹಂಚಿಕೆ. ತನ್ನ ಈ ಯೋಜನೆಯ ಅನುಷ್ಠಾನದಲ್ಲಿ ಪಾಕಿಸ್ತಾನ ಸೂಕ್ತ ಹಾಗೂ ವಿಶ್ವಾಸಾರ್ಹ ಸಹಭಾಗಿ ಎಂದು ಚೀನಾ ಎಂದೋ ಅರಿತಿದೆ. ಭಾರತವನ್ನು ಬಲಹೀನಗೊಳಿಸಿ ದಕ್ಷಿಣ ಏಷ್ಯಾದಲ್ಲಿ ತನ್ನ ನಂಬಿಗಸ್ತ ಮಿತ್ರ ಪಾಕಿಸ್ತಾನವನ್ನು ಬಲಿಷ್ಠ ದೇಶವಾಗಿ ಬೆಳೆಸುವುದು ಚೀನಾದ ಹಿಡನ್ ಅಜೆಂಡಾ. ಟಿಬೆಟ್ನಲ್ಲಿ ಗಡಿಗೆ ಹತ್ತಿರದಲ್ಲೇ ಚೀನೀ ಸೇನೆ ಸುವ್ಯವಸ್ಥಿತ ಸೇನಾ ಠಿಕಾಣೆಗಳು, ವಾಯುನೆಲೆಗಳು ಹಾಗೂ ಕ್ಷಿಪಣಿ ಉಡಾವಣಾ ಸೌಲಭ್ಯಗಳನ್ನು ಸ್ಥಾಪಿಸಿ ಅವೆಲ್ಲಕ್ಕೂ ರೈಲು, ರಸ್ತೆ ಸಂಪರ್ಕ ಕಲ್ಪಿಸಿಕೊಂಡಿದೆ. ಇನ್ನು ಮ್ಯಾನ್ಮಾರ್ ಮೂಲಕ ಬಂಗಾಳ ಕೊಲ್ಲಿಗೂ, ಪಾಕಿಸ್ತಾನದ ಮೂಲಕ ಅರಬ್ಬೀ ಸಮುದ್ರಕ್ಕೂ ಸಂಪರ್ಕ ಕಲ್ಪಿಸಿಕೊಂಡ ನಂತರ ಭಾರತವನ್ನು ಕಟ್ಟಿಹಾಕಿ ಈ ವಲಯದಲ್ಲಿ ತನಗೆ ಬೇಕಾದ್ದನ್ನು ಮಾಡಲು ಪಾಕಿಸ್ತಾನಕ್ಕೆ ಚೀನಾ ಅವಕಾಶ ಮಾಡಿಕೊಡುತ್ತದೆ. ಆಗ ಕಾಶ್ಮೀರವನ್ನು ತನ್ನ ವಶ ಮಾಡಿಕೊಳ್ಳಲು, ಪಂಜಾಬ್ನಲ್ಲಿ ಖಲಿಸ್ತಾನ್ ಸ್ಥಾಪಿಸಲು ಪಾಕಿಸ್ತಾನಕ್ಕೆ ಸುಲಭವಾಗುತ್ತದೆ. ಯಾವುದೇ ಪ್ರತಿಕಾರ್ಯಾಚರಣೆ ಕೈಗೊಳ್ಳಲು ಭಾರತ ಮುಂದಾದರೆ ಚೀನಾ ನಾಲ್ಕೂ ದಿಕ್ಕುಗಳಿಂದ ಬೆದರಿಕೆ ಒಡ್ಡುತ್ತದೆ. ಜತೆಗೆ ಪೂವೋತ್ತರ ರಾಜ್ಯಗಳು ಸ್ವತಂತ್ರವಾಗುವಂತೆ, ಅವು ತನ್ನ ಪ್ರಭಾವವಲ ಯದೊಳಗೆ ಇರುವಂತೆ ತಂತ್ರ ಹೂಡುತ್ತದೆ. ಇದು ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ತಾನ ಜತೆಗೂಡಿ ಹೆಣೆದಿರುವ ಹೂಟ. ಇದನ್ನು ನಿಷ್ಪಲಗೊಳಿಸಲು ಭಾರತಕ್ಕಿರಬಹುದಾದ ಮಾಗೋಪಾಯಗಳ ಪರಿಚಯ ಮುಂದಿನ ವಾರ.