Wednesday, April 26, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ‘ಉಡಾನ್‌’ಗೆ ಇಂದು ಚಾಲನೆ

ನವದೆಹಲಿ: ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ‘ಉಡಾನ್‌’ ಯೋಜನೆ ಗುರುವಾರದಿಂದ ಆರಂಭವಾಗಲಿದೆ.

ಪ್ರಾದೇಶಿಕವಾಗಿ ವಾಯು ಸಂಪರ್ಕ ಕಲ್ಪಿಸುವ ‘ಉಡಾನ್‌’ (ಶ್ರೀಸಾಮಾನ್ಯನಿಗೂ ವಿಮಾನ ಯಾನ ಯೋಗ)’ ಯೋಜನೆ ಅಡಿಯಲ್ಲಿ ಒಂದು ಸೀಟಿಗೆ, ಒಂದು ಗಂಟೆ ಪ್ರಯಾಣಕ್ಕೆ ₹2,500 ದರ ನಿಗದಿಪಡಿಸಲಾಗಿದೆ. ಇದು ಅಂದಾಜು 500 ಕಿಲೋ ಮೀಟರ್‌ಗೆ ಅನ್ವಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಪ್ರಥಮ ವಿಮಾನ ಹಾರಾಟ ಶಿಮ್ಲಾ–ದೆಹಲಿ ನಡುವೆ ಆರಂಭವಾಗಲಿದೆ. ಬಳಿಕ ಕಡಪ–ಹೈದರಾಬಾದ್‌ ಮತ್ತು ನಾಂದೇಡ್‌–ಹೈದರಾಬಾದ್‌ ನಡುವೆ ಆರಂಭವಾಗಲಿವೆ.

ಈ ಯೋಜನೆ ಅಡಿಯಲ್ಲಿ ಮೈಸೂರು, ಬೀದರ್‌ ಸೇರಿದಂತೆ ದೇಶದ ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ 128 ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಐದು  ಏರ್‌ಲೈನ್ಸ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಚ್‌ 30ರಂದು ಪ್ರಕಟಿಸಿತ್ತು.

‘ಮಾರುಕಟ್ಟೆ ಆಧಾರಿತ ವ್ಯವಸ್ಥೆ ಅಡಿಯಲ್ಲಿ ಪ್ರಾದೇಶಿಕ ಸಂಪರ್ಕ ಕಲ್ಪಿಸುವ  ಉಡಾನ್‌ ಪ್ರಥಮ ಜಾಗತಿಕ ಯೋಜನೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್‌ ಮಾಡಿದ್ದಾರೆ.

‘ಪ್ರಾದೇಶಿಕವಾಗಿ ಮಹತ್ವ ಪಡೆದಿರುವ ನಗರಗಳಿಗೆ ವಿಮಾನ ಮೂಲಕ ನಾಗರಿಕರು ತೆರಳುವ ಸೌಲಭ್ಯ ಕಲ್ಪಿಸಲು ಈ ಯೋಜನೆ ರೂಪಿಸಲಾಗಿದೆ. ಉಡಾನ್‌ ಯೋಜನೆಯನ್ನು ರಾಷ್ಟ್ರೀಯ ನಾಗರಿಕ ವಿಮಾನ ನೀತಿಯ ಅಂಗವಾಗಿ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಂದಾಜು ₹205 ಕೋಟಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಸಹ ನೆರವು ನೀಡಲಿದ್ದು, 19 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಈ ಉದ್ದೇಶಕ್ಕಾಗಿ ಒಪ್ಪಂದ ಮಾಡಿಕೊಂಡಿವೆ.

ಏರ್‌ಇಂಡಿಯಾದ ಅಲಯನ್ಸ್‌ ಏರ್‌, ಸ್ಪೈಸ್‌ ಜೆಟ್‌, ಟ್ರುಜೆಟ್‌, ಏರ್‌ ಡೆಕ್ಕನ್‌ ಮತ್ತು ಏರ್‌ ಒಡಿಶಾ ಏರ್‌ಲೈನ್ಸ್‌ಗಳು ಬಿಡ್ಡಿಂಗ್‌ನಲ್ಲಿ ಆಯ್ಕೆಯಾಗಿವೆ.
ಈ ಏರ್‌ಲೈನ್‌ಗಳ ವಿಮಾನಗಳಲ್ಲಿ ವಿಶೇಷ ರಿಯಾಯಿತಿ ದರದ ಸೌಲಭ್ಯ 40 ಸೀಟುಗಳಿಗೆ ಮಾತ್ರ ದೊರೆಯಲಿದೆ.

ಅಲಯನ್ಸ್‌ ಏರ್‌ ಮತ್ತು ಏರ್  ಡೆಕ್ಕನ್‌ ಶಿಮ್ಲಾ–ದೆಹಲಿ ವಲಯ ಹಾಗೂ ಟ್ರುಜೆಟ್‌ ಕಡಪ–ಹೈದರಾಬಾದ್‌ ಮತ್ತು ನಂದೇಡ್‌–ಹೈದರಾಬಾದ್‌ ವಲಯದಲ್ಲಿ ಹಾರಾಟ ನಡೆಸಲು ಹಕ್ಕುಗಳನ್ನು ಪಡೆದಿದೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...