ಶ್ರೀನಗರ: ಕುಪ್ವಾರಾದ ಪಂಜ್ಗಾಂನಲ್ಲಿ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಇರುವ ಸೇನಾ ಶಿಬಿರದ ಮೇಲೆ ಗುರುವಾರ ಮುಂಜಾನೆ 4ರ ಸುಮಾರಿಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ಸೇನಾಧಿಕಾರಿಯೂ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಐವರು ಯೋಧರು ಗಂಭೀರ ಗಾಯಗೊಂಡಿದ್ದಾರೆ.
ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ದಾಳಿಕೋರರಲ್ಲಿ ಇಬ್ಬರಿಗಿಂತ ಹೆಚ್ಚು ಉಗ್ರರು ಇದ್ದಿರಬಹುದು ಎಂದು ಭದ್ರತಾ ಪಡೆಗಳು ಅನುಮಾನ ವ್ಯಕ್ತಪಡಿಸಿವೆ. ತಲೆಮರೆಸಿಕೊಂಡಿರಬಹುದು ಎನ್ನಲಾದ ಉಗ್ರರಿಂದ ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ಸೇನೆ ಕ್ರಮ ಕೈಗೊಳ್ಳುತ್ತಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮೃತಪಟ್ಟಿರುವ ಸೇನಾಧಿಕಾರಿಯನ್ನು ಕ್ಯಾಪ್ಟನ್ ಆಯುಷ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಯೋಧರ ಗುರುತನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ.
ಗಾಯಗೊಂಡಿರುವ ಯೋಧರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರಕ್ಕೆ ಕರೆದೊಯ್ಯಲಾಗಿದ್ದು, ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
No comments:
Post a Comment