ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ
‘ಕಾಶ್ಮೀರ ವಿವಾದ: ಐಸಿಜೆಗೆ ದೂರು ನೀಡಲು ಅವಕಾಶವಿಲ್ಲ’
ನವದೆಹಲಿ: ಕಾಶ್ಮೀರ ವಿವಾದವನ್ನು ಪಾಕಿಸ್ತಾನವು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಒಯ್ಯುವುದಕ್ಕೆ ಸಾಧ್ಯವೇ ಇಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.
ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು. ಇದು 1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಒಪ್ಪಂದದ ಪ್ರಕಾರವೇ ಬಗೆಹರಿಯಬೇಕು ಎಂದು ಅವರು ತಿಳಿಸಿದರು. ವಿದೇಶಾಂಗ ನೀತಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಕಳೆದ ಮೂರು ವರ್ಷಗಳ ಸಾಧನೆಯನ್ನು ವಿವರಿಸಲು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಐಸಿಜೆಗೆ ಭಾರತ ದೂರು ನೀಡಿತ್ತು. ಅದೇ ರೀತಿಯಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನ ದೂರು ನೀಡಲು ಸಾಧ್ಯವಿಲ್ಲ ಎಂದು ಸುಷ್ಮಾ ಸ್ಪಷ್ಟಪಡಿಸಿದರು.
‘ಡೊನಾಲ್ಡ್ ಟ್ರಂಪ್ ಆರೋಪದಲ್ಲಿ ಹುರುಳಿಲ್ಲ’
ತಾಪಮಾನ ಏರಿಕೆ ತಡೆಯುವುದಕ್ಕಾಗಿ ಮಾಡಿಕೊಂಡ ಪ್ಯಾರಿಸ್ ಒಪ್ಪಂದದಿಂದ ಭಾರತಕ್ಕೆ ಲಕ್ಷಾಂತರ ಡಾಲರ್ ಲಾಭ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿರುವ ಆರೋಪವನ್ನು ಸುಷ್ಮಾ ಸ್ವರಾಜ್ ಅಲ್ಲಗಳೆದರು. ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸುವ ಸಂದರ್ಭದಲ್ಲಿ ಟ್ರಂಪ್ ಈ ಆರೋಪ ಮಾಡಿದ್ದರು.
ಅಮೆರಿಕವು ಒಪ್ಪಂದದಲ್ಲಿ ಮುಂದುವರಿದರೂ ಇಲ್ಲದಿದ್ದರೂ ಭಾರತದ ಬದ್ಧತೆ ಬದಲಾಗದು ಎಂದು ಅವರು ಹೇಳಿದರು.
No comments:
Post a Comment