ಬೆಂಗಳೂರು: ಸೀಬರ್ಡ್ ನೌಕಾ ನೆಲೆ ಯೋಜನೆಯ ಹಂತ– 2ಎ ನಿರ್ಮಾಣ ಚಟುವಟಿಕೆಗೆ ಅಗತ್ಯವಿರುವ ಕಲ್ಲುಗಳನ್ನು ಒದಗಿಸಲು ಉತ್ತರ ಕನ್ನಡ ಜಿಲ್ಲೆಯ ಕೋಡಾರ್ ಗ್ರಾಮದ ಅಲಿಗದ್ದಾ ಗುಡ್ಡದ ಅರಣ್ಯ ಭೂಮಿಯಲ್ಲಿಗಣಿಗಾರಿಕೆಗೆ ನೀಡಿದ್ದ ಅನುಮತಿ ನವೀಕರಣಕ್ಕೆ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್ಇಸಿ) ಶಿಫಾರಸು ಮಾಡಿದೆ.
ಗಣಿಗಾರಿಕೆಗೆ ನೀಡಿರುವ ಅನುಮತಿ ತಾತ್ಕಾಲಿಕ. ನೌಕಾನೆಲೆಯ 2ಎ ಹಂತ ಅನುಷ್ಠಾನ ಪೂರ್ಣಗೊಳ್ಳುವವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಕರಾವಳಿ ನಿಯಂತ್ರಣಾ ವಲಯಕ್ಕೆ ಸಂಬಂಧಿಸಿದ ಅನುಮತಿ, ಪರಿಸರ ಇಲಾಖೆ ಅನುಮತಿ ಪಡೆದ ಬಳಿಕವಷ್ಟೇ ಗಣಿಗಾರಿಕೆ ಆರಂಭಿಸಬೇಕು ಎಂಬ ಷರತ್ತುಗಳನ್ನೂ ವಿಧಿಸುವಂತೆಯೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಆರ್ಇಸಿ ಹೇಳಿದೆ.
ನೌಕಾನೆಲೆ ಸ್ಥಾಪನೆಗೆ 1986ರಲ್ಲಿ ಅನುಮತಿ ನೀಡುವಾಗ 2,259 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡಿತ್ತು. ಇಲ್ಲಿ 200 ಹೆಕ್ಟೇರ್ಗಿಂತ ಹೆಚ್ಚು ಜಾಗದಲ್ಲಿ ಮರಗಳನ್ನು ಕಡಿಯಬಾರದು ಎಂಬ ಷರತ್ತು ವಿಧಿಸಿತ್ತು. ಮರ ಕಡಿಯಲು ಅನುಮತಿ ನೀಡಿದ 200 ಹೆಕ್ಟೇರ್ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು.
ಆದರೆ, 81.75 ಹೆಕ್ಟೇರ್ ಅರಣ್ಯ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು 1999ರಲ್ಲಿ ಅನುಮತಿ ನೀಡಲಾಗಿತ್ತು. ಇದರ ಅವಧಿ 2003ರಲ್ಲಿ ಕೊನೆಗೊಂಡಿತ್ತು.
ಅಲಿಗದ್ದಾ ಗುಡ್ಡದ 24.50 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನವೀಕರಿಸುವಂತೆ ರಾಜ್ಯ ಸರ್ಕಾರ 2017ರ ಮೇ 26ರಂದು ಸಚಿವಾಲಯವನ್ನು ಕೋರಿತ್ತು.
No comments:
Post a Comment