Monday, August 28, 2017

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: 400 ಶಾಲಾ ಮಕ್ಕಳ ಜೀವ ಉಳಿಸಿದ ಪೊಲೀಸ್ ಕಾನ್‌ಸ್ಟೇಬಲ್

ಭೋಪಾಲ್: ಶಾಲೆ ಆವರಣದಲ್ಲಿ ಪತ್ತೆಯಾದ ಬಾಂಬ್ ಅನ್ನು ಕಾನ್‌ಸ್ಟೇಬಲ್ ಒಂದು ಕಿ.ಮೀವರೆಗೆ ಹೆಗಲ ಮೇಲೆ ಹೊತ್ತೊಯ್ದ 400 ಮಕ್ಕಳ ಜೀವ ಉಳಿಸಿದ ಘಟನೆ ಮಧ್ಯಪ್ರದೇಶದ ಚಿತೋರಾ ಎಂಬ ಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಮಕ್ಕಳ ಜೀವ ಉಳಿಸಿದ ಕಾನ್‌ಸ್ಟೇಬಲ್ ಹೆಸರು ಅಭಿಷೇಕ್ ಪಟೇಲ್. 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಪಡೆ ನಿಷ್ಕ್ರಿಯಗೊಳಿಸಲು ಹಿಂದೇಟು ಹಾಕಿದೆ. ಆಗ ಪಟೇಲ್ ಈ ಸಾಹಸ ಮೆರೆದಿದ್ದಾರೆ.
ಚಿತೋರಾ ಎಂಬ ಹಳ್ಳಿಯ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿದೆ. ಆಗ ಶಾಲಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಪಟೇಲ್ ಸಿಬ್ಬಂದಿ ಜತೆ ಬಂದಿದ್ದರು. 
‘100 ಸಂಖ್ಯೆಗೆ ಕರೆ ಬಂದಾಗ ಶಾಲೆ ಬಳಿ ಬಂದೆವು. ನಮ್ಮ ಉದ್ದೇಶ ಬಾಂಬ್ ಅನ್ನು ಶಾಲೆಯಿಂದ ದೂರ ತೆಗೆದುಕೊಂಡು ಹೋಗುವುದಾಗಿತ್ತು. ಬಾಂಬ್ ಸಿಡಿದರೆ ಸುಮಾರು 500 ಮೀಟರ್‌ನಷ್ಟು ಪ್ರದೇಶ ಹಾನಿಗೊಳಗಾಗುತ್ತದೆ ಎಂದು ತರಬೇತಿ ಸಮಯದಲ್ಲಿ ತಿಳಿಸಿದ್ದರು. ಹಾಗಾಗಿ ನಾನು ಬಾಂಬ್‌ ಅನ್ನು ಒಂದು ಕಿ.ಮೀ ದೂರದವರೆಗೆ ತೆಗೆದುಕೊಂಡು ಹೋದೆ’ ಎಂದು ಪಟೇಲ್ ಘಟನೆ ಬಗ್ಗೆ ವಿವರಿಸಿದ್ದಾರೆ. 
ಸಮಯಪ್ರಜ್ಞೆ ಮೆರೆದು 400 ಶಾಲೆ ಮಕ್ಕಳ ಪ್ರಾಣ ಉಳಿಸಿದ ಪಟೇಲ್ ಅವರನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.
ಶಾಲೆಯ ಬಳಿ ಬಾಂಬ್ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಸಕ್ಸೇನಾ ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: ಸರಸ್ವತಿ ನದಿಯ ಮೂಲ ಹಿಮಾಲಯವೇ?

,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇತ್ತು ಎಂದು ಭಾವಿಸಲಾಗಿರುವ ಸರಸ್ವತಿ ನದಿಯ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲ. ಹೊಸ ಅಧ್ಯಯನವೊಂದು ಸತ್ಯ ಸಂಗತಿ ಮೇಲೆ ಬೆಳಕು ಚೆಲ್ಲಲಿದೆ. ಈ ಅಧ್ಯಯನಕ್ಕೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹೆಚ್ಚಿನ ಅನುದಾನ ನೀಡಿದೆ.

ಥಾರ್ ಮರುಭೂಮಿಯಲ್ಲಿನ ’ಗ್ರೇಟ್ ರನ್ ಆಫ್ ಕಚ್’ನ ಏಕತಾನವಾದ ವಿಸ್ತಾರವು, ಉಪ್ಪಿನ ಜೌಗಿನ ನಡುವೆ ಅಲ್ಲಲ್ಲಿ ಮಣ್ಣಿನ ಸಮತಳವನ್ನುಳ್ಳ ಸುಂದರ ಪ್ರದೇಶ. ಬೇಸಿಗೆಯಲ್ಲಿ ಹೀಗೆ ಒಣಗಿದ್ದ ಈ ಸ್ಥಳ,  ಮಳೆ ಸಮಯದಲ್ಲಿ ಮತ್ತು ಚಳಿಗಾಲದಲ್ಲಿ ಸಂಪೂರ್ಣ ಜೌಗುಮಯ. ಈ ಕಠಿಣವಾದ, ಅಷ್ಟೇನೂ ಆಳವಿಲ್ಲದ, ಸಮುದ್ರದ ಜಲಾನಯನ ಪ್ರದೇಶವು ಕಂಚಿನ ಯುಗದ ಹರಪ್ಪ ನಾಗರಿಕತೆ ಮತ್ತು ಎಂದೋ ಕಾಣೆಯಾದ ಸರಸ್ವತಿ ನದಿಯ ನಿಗೂಢತೆಯ ಬಗ್ಗೆ ಮಾಹಿತಿಯ ನಿಧಿಯನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ.
ಸರಸ್ವತಿ ನದಿಯ ಕುತೂಹಲಕಾರಿ ಪ್ರಕರಣವು ಅನೇಕ ತತ್ವಜ್ಞಾನಿಗಳು, ಕವಿಗಳು, ವಿದ್ವಾಂಸರು ಮತ್ತು ಭೂವಿಜ್ಞಾನಿಗಳ ಗಮನ ಸೆಳೆದಿದೆ.
ಈ ಪ್ರಬಲ ನದಿಯು ಹಿಮಾಲಯದಲ್ಲಿ ಹುಟ್ಟಿ, ಸಿಂಧೂನದಿಗೆ ಸಮಾನಾಂತರವಾಗಿ ಹರಿದು, ಸುಮಾರು 2,000 ವರ್ಷಗಳ ಹಿಂದೆ ಇಂದಿನ 'ರನ್ ಆಫ್ ಕಚ್'ನ ಸಮೀಪ ಅರಬ್ಬೀ ಸಮುದ್ರಪಾತ್ರಕ್ಕೆ ಸೇರುತ್ತಿತ್ತು ಎಂದು ಭಾವಿಸಲಾಗಿದೆ. ಆದರೆ, ಇಂದು ಈ ನದಿ ಅಸ್ತಿತ್ವದಲ್ಲಿಲ್ಲ ಅಥವಾ ಅದರ ಅಸ್ತಿತ್ವದ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲ.
ಈಗ ಉಳಿದಿರುವುದು, ಋಗ್ವೇದದಲ್ಲಿ ಸ್ತುತಿಗೀತೆಗಳ ಮೂಲಕ ಈ ಮಹಾನ್ ನದಿಯನ್ನು ಹಾಡಿ ಹೊಗಳಿರುವುದಷ್ಟೇ. 'ರನ್ ಆಫ್ ಕಚ್' ಪ್ರದೇಶವು ತನ್ನ ತೀವ್ರ ಹವಾಮಾನದಿಂದಾಗಿ, 'ಅತ್ಯಂತ ಕಡಿಮೆ ಸಂಶೋಧನೆಗೆ ಒಳಗಾಗಿರುವ ಪ್ರದೇಶ'ಗಳಲ್ಲಿ ಒಂದಾಗಿದೆಯಾದರೂ, ಈಗ ನಡೆಯುತ್ತಿರುವ ಹೊಸ ಅಧ್ಯಯನವೊಂದು, ಒಮ್ಮೆ ವೈಭವೋಪೇತವಾಗಿ ಹರಿದು ಕಾಣೆಯಾದ ಪ್ರಬಲ ನದಿ 'ಸರಸ್ವತಿ'ಯ ಹಿಂದಿರುವ ಸತ್ಯದ ಬಗ್ಗೆ ಹಲವು ವಿಷಯಗಳ‌ನ್ನು ಬಹಿರಂಗ
ಪಡಿಸಲಿದೆ.
ಈ ಹೊಸ ಸಹಯೋಗದ ಅಧ್ಯಯನದಲ್ಲಿ, ಬರೋಡದ 'ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ'ದ ಭೂವಿಜ್ಞಾನ ಇಲಾಖೆ, ಅಹಮದಾಬಾದ್‌ನ 'ಭೌತಿಕ ಸಂಶೋಧನಾ ಪ್ರಯೋಗಾಲಯ' ಮತ್ತು ಅಮೆರಿಕದ 'ವುಡ್ಸ್ ಹೋಲ್ ಸಮುದ್ರವಿಜ್ಞಾನ ಸಂಸ್ಥೆ'ಯ ಸಂಶೋಧಕರು, 'ಗ್ರೇಟ್ ರನ್ ಆಫ್ ಕಚ್'ನ ಮಣ್ಣಿನ ಸಂಚಯಗಳನ್ನು ಪರಿಶೀಲಿಸುವ ಮೂಲಕ, ಸರಸ್ವತಿ ನದಿಯ ಅಸ್ತಿತ್ವಕ್ಕೆ ಕೆಲವು ಆಸಕ್ತಿದಾಯಕ ಪುರಾವೆಗಳನ್ನು ನೀಡಲು ಪ್ರಯತ್ನಿಸಿದ್ದಾರೆ. 'ನೇಚರ್'ನ ವೈಜ್ಞಾನಿಕ ವರದಿಗಳ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನಕ್ಕೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹೆಚ್ಚಿನ ಅನುದಾನ ನೀಡಿದೆ.
'ರನ್ ಆಫ್ ಕಚ್'ನಲ್ಲಿ ತುಂಬಿದ ದೊಡ್ಡ ಪ್ರಮಾಣದ ಮಣ್ಣಿನ ಸಂಚಯದ ಮೂಲವನ್ನು ಕಂಡುಕೊಳ್ಳಲು ನಮ್ಮ ಪ್ರಯತ್ನನಡೆದಿದೆ’ ಎನ್ನುತ್ತಾರೆ ಅಧ್ಯಯನದ ಸಹಲೇಖಕ ಪ್ರೊಫೆಸರ್ ಡಿ.ಎಂ. ಮೌರ್ಯ.
ಈ ಅಧ್ಯಯನಕ್ಕಾಗಿ ಸಂಶೋಧಕರು ಎರಡು ವಿಭಿನ್ನ ತಂತ್ರವನ್ನು ಬಳಸಿ, ಫಲಿತಾಂಶಗಳನ್ನು ಎರಡು ಪ್ರತ್ಯೇಕ ಅಧ್ಯಯನಗಳಲ್ಲಿ ವರದಿ ಮಾಡಿದರು. ಮೊದಲ ಅಧ್ಯಯನವು 'ರನ್ ಆಫ್ ಕಚ್' ಜಲಾನಯನದಲ್ಲಿ ಮಣ್ಣಿನ ಖನಿಜ ಜೋಡಣೆಯ ಮೇಲೆ ಕೇಂದ್ರೀಕರಿಸಿತ್ತು ಮತ್ತು ಎರಡನೆಯದು ಸ್ಟ್ರಾಂಷಿಯಂ-ನಿಯೋಡೈಮಿಯಮ್
(Sಡಿ-ಓಜ) ಸಮಸ್ಥಾನಿ ಸಾಕ್ಷ್ಯವನ್ನು ವಿಶ್ಲೇಷಿಸಿತು.
ಜೇಡಿಮಣ್ಣಿನ ಖನಿಜಗಳ ಅಧ್ಯಯನವು ಅವುಗಳ ಗುಣಲಕ್ಷಣಗಳು, ಸಂಯೋಜನೆ, ವರ್ಗೀಕರಣ, ಸ್ಫಟಿಕ ರಚನೆ, ಪ್ರಕೃತಿಯಲ್ಲಿ ಸಂಭವಿಸುವಿಕೆ ಮತ್ತು ವಿತರಣೆ ಸೇರಿದಂತೆ ಮಣ್ಣಿನ ಖನಿಜಗಳ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
'ರನ್ ಆಫ್ ಕಚ್' ಜಲಾನಯನದಲ್ಲಿ ಮಣ್ಣಿನ ಖನಿಜ ಸಂಯೋಜನೆಯ ಕುರಿತು ಅಧ್ಯಯನ ಮಾಡಿದ ಸಂಶೋಧಕರಿಗೆ, ಸ್ಥಳೀಯ ದಕ್ಷಿಣ ಕಚ್ ಭೂಪ್ರದೇಶದ ಬೆಟ್ಟಗಳಿಂದ ಕೊಡುಗೆಯಾಗಿ ಬಂದಿರುವ 'ಕಲೋಲಿನೈಟ್'ನ ಜೊತೆಗೆ 'ಇಲ್ಲೈಟ್', 'ಕ್ಲೋರೈಟ್'ನಂತಹ ಖನಿಜಗಳೂ ಕಂಡುಬಂದಿದ್ದು, ಹಿಮಾಲಯವೇ ಇವಕ್ಕೆ ಮೂಲ ಎಂಬುದನ್ನು ಖಾತ್ರಿ ಪಡಿಸಿದೆ. 'ಸ್ಮೆಕ್ತೈತ್ಸ್' ಎಂಬ ಖನಿಜವೂ ಕಂಡುಬಂದಿದ್ದು, ಸ್ಥಳೀಯ ಅಗ್ನಿಶಿಲೆಗಳು ಮತ್ತು/ಅಥವಾ 'ನರ'ನದಿಯ ಮೂಲಕ ಪೂರ್ವ ಪಾಕಿಸ್ತಾನದಿಂದ 'ರನ್ ಆಫ್ ಕಚ್'ಗೆ ಹರಿದಿರುವ ಪುರಾವೆ ಸಿಕ್ಕಿದೆ.
ಸಂಶೋಧಕರು ತಮ್ಮ ಎರಡನೆಯ ಅಧ್ಯಯನದಲ್ಲಿ, 'ಕಚ್'ನ ಮಧ್ಯಪ್ರಾಂತ್ಯದ 'ಧೋರೊ' ಗ್ರಾಮದ ಬಳಿ ದೊರೆತ ಕೆಸರಿನ ಮಾದರಿಗಳನ್ನು ಪಡೆದು, ಅವುಗಳಲ್ಲಿ Sಡಿ-ಓಜ ಐಸೋಟೋಪ್‌ಗಳ ಸಂಯೋಜನೆಯನ್ನು ವಿಶ್ಲೇಷಿಸಿದರು.
ಈ ಎರಡೂ ಸಮಸ್ಥಾನಿಗಳ ವಿಶ್ಲೇಷಣೆಯು, ಯಾವ ಬಗೆಯ ಬಂಡೆಗಳು ಯಾವ ಸಮಯದಲ್ಲಿ ರೂಪುಗೊಂಡವು ಎಂಬುದನ್ನು ತಿಳಿಸುತ್ತದೆ. ಏಕೆಂದರೆ, ವಿಭಿನ್ನ ಸಮಯದ ಅವಧಿಗಳಲ್ಲಿ ರೂಪುಗೊಂಡ ವಿಭಿನ್ನ ರೀತಿಯ ಬಂಡೆಗಳು, ತಮ್ಮೊಳಗೆ ಈ ಅಂಶಗಳ ವಿಭಿನ್ನ ಘಟಕಗಳು ಮತ್ತು ಬೇರೆ ಬೇರೆ ಸಮಸ್ಥಾನಿ ಅನುಪಾತಗಳನ್ನು ಹೊಂದಿರುವ ಕಾರಣದಿಂದಾಗಿ, ಸಂಚಯಗಳು ಮತ್ತು ಅವುಗಳ ಘಟಕಗಳ ರಚನೆಯ ಸಮಯವನ್ನು ನಿರ್ಧರಿಸಲು ನಮಗೆ ಸಹಾಯ ಮಾಡುತ್ತವೆ. ಸಂಚಯಗಳ ಮೂಲವನ್ನು ಪತ್ತೆಹಚ್ಚಲು ಇದು ಅತ್ಯಂತ ವಿಶ್ವಾಸಾರ್ಹ ವಿಧಾನ.
ಇದಲ್ಲದೆ, 'ಗ್ರೇಟ್ ರನ್ ಆಫ್ ಕಚ್'ನ ಜಲಾನಯನ ಪ್ರದೇಶಕ್ಕೆ ಸ್ಥಳೀಯ ಕೊಡುಗೆಯಾಗಿ ಬಂದ ಸಂಚಯವನ್ನು ಪರಿಶೀಲಿಸುವ ಸಲುವಾಗಿ, ಸಂಶೋಧಕರು ಅಲ್ಲಿಗೆ ಸಮೀಪವಿರುವ 'ರುಪೆನ್' ಮತ್ತು 'ಲೂನಿ'ಯಂತಹ ಸ್ಥಳೀಯ ಸಕ್ರಿಯ ನದಿಗಳ ಮಾದರಿಗಳನ್ನು, 'ಧೋರೊ' ಸಂಚಯಗಳ ಐಸೋಟೋಪ್ ಅನುಪಾತಗಳಿಗೆ ಹೋಲಿಸಿದ್ದಾರೆ. ಇದರ ಪ್ರಕಾರವೂ, 'ಧೋರೊ' ಪ್ರದೇಶದ ಸಂಚಯಗಳು ಇಲ್ಲೈಟ್ ಮತ್ತು ಕ್ಲೋರೈಟ್‌ಗಳಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಈ ಸಂಚಯಗಳ ಮೂಲವು ಹಿಮಾಲಯ ಮತ್ತು /ಅಥವಾ ಕಾರಾಕೋರಮ್ ಪರ್ವತಶ್ರೇಣಿಗಳಾಗಿದ್ದು, ಹತ್ತುಸಾವಿರ ವರ್ಷಗಳ ಹಿಂದೆ 'ಹೊಲೊಸೀನ್'ನ ಸಂದರ್ಭದಲ್ಲಿ ಇಲ್ಲಿ ಬಂದು ಸೇರಿರುವ ಸಾಧ್ಯತೆಯಿದೆ.
‘ಎರಡೂ ಅಧ್ಯಯನಗಳು ಈ ನದಿಯ ಮೂಲ ಹಿಮಾಲಯ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯವನ್ನು ಒದಗಿಸುತ್ತವೆ’ ಎನ್ನುತ್ತಾರೆ ಪ್ರೊಫೆಸರ್ ಮೌರ್ಯ.
ಸರಸ್ವತಿ ನದಿಯಿಂದ ಬರುವ ಮಣ್ಣಿನ ಸಂಚಯಗಳ ಅಂತಿಮ ವಿಶ್ರಾಂತಿಯ ಸ್ಥಳವು 'ಗ್ರೇಟ್ ರನ್ ಆಫ್ ಕಚ್'ನ ಜಲಾನಯನವೇ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯವನ್ನು ಒದಗಿಸುವಲ್ಲಿ ಈ ಅಧ್ಯಯನಗಳು ಗಮನಾರ್ಹ ಕಾರ್ಯವೆಸಗಿವೆ. ಹಾಗಾದರೆ, ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆಯಿದ್ದ ಚರ್ಚೆಗೆ ಇದು ಮಂಗಳ ಹಾಡುತ್ತದೆಯೇ. ಇನ್ನೂ ಇಲ್ಲವೆನ್ನುತ್ತಾರೆ ಅವರು. ಅವರ ಪ್ರಕಾರ, ಅಂತಿಮ ಉತ್ತರವು ಭವಿಷ್ಯದ ಸಂಶೋಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಹಿಮಾಲಯದಿಂದ 'ಗ್ರೇಟ್ ರನ್ ಆಫ್ ಕಚ್'ನವರೆಗೆ ಸರಸ್ವತಿ ನದಿಯ ಸಂಪೂರ್ಣ ಜಾಡನ್ನು ನಿಖರವಾಗಿ ಪುನರ್‌ನಿರ್ಮಿಸಲು ಗಮನಹರಿಸಬೇಕು. ವಿವರವಾದ ಭೂಗರ್ಭಶಾಸ್ತ್ರ, ಭೂಭೌತಿಕ ಮತ್ತು ಭೂರಾಸಾಯನಿಕ ಅಧ್ಯಯನಗಳ ಮೂಲಕ ಇದನ್ನು ಸಾಧಿಸಬಹುದು.
–ಗುಬ್ಬಿ ಲ್ಯಾಬ್ಸ್‌ (ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: ನೂತನ ಸಿಜೆಐ ಆಗಿ ದೀಪಕ್‌ ಮಿಶ್ರಾ ಪ್ರಮಾಣವಚನ ಸ್ವೀಕಾರ

ನವದೆಹಲಿ (ಪಿಟಿಐ): ದೀಪಕ್‌ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನ  ನೂತನ ಮುಖ್ಯ ನ್ಯಾಯ­ಮೂರ್ತಿಯಾಗಿ (ಸಿಜೆಐ) ಸೋಮವಾರ  ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ನಡೆದ ಸರಳ ಸಮಾರಂಭ­ದಲ್ಲಿ 63 ವರ್ಷದ ದೀಪಕ್‌ ಮಿಶ್ರಾ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಪ್ರಮಾಣವಚನ ಬೋಧಿಸಿದರು.
2018ರ ಆಕ್ಟೋಬರ್ ತಿಂಗಳವರೆಗೆ ದೀಪಕ್‌ ಮಿಶ್ರಾ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ 10 ವರ್ಷ ಜೈಲು: ಸಿಬಿಐ ವಿಶೇಷ ನ್ಯಾಯಾಲಯ

ರೋಹ್ಟಕ್‌: ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ(50 ವರ್ಷ) ಸಿಬಿಐನ ವಿಶೇಷ ನ್ಯಾಯಾಲಯ ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಿಬಿಐ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಅವರು ಹೆಲಿಕಾಪ್ಟರ್‌ ಮೂಲಕ ರೋಹ್ಟಕ್‌ ತಲುಪಿ ಸುನಾರಿಯಾದಲ್ಲಿರುವ ಜೈಲಿನಲ್ಲೇ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ದೋಷಿಯಾಗಿರುವ ಗುರ್ಮೀತ್‌ಗೆ 10 ವರ್ಷ ಕಾರಾಗೃಹ ಶಿಕ್ಷೆ ಪ್ರಕಟಿಸಲಾಗಿದೆ. ಕಾರಾಗೃಹದಲ್ಲಿ ಇವರಿಗೆ ನೀಡಲಾಗಿರುವ ಸಂಖ್ಯೆ1997.
ಸಿಬಿಐ ಪರ ವಕೀಲರು ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದರು. ಸಮಾಜ ಸೇವಕರಾಗಿರುವ ಗುರ್ಮೀತ್‌ ಅವರ ಸೇವೆ ಪರಿಗಣಿಸಿ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸುವಂತೆ ಗುರ್ಮೀತ್‌ ಪರ ವಕೀಲ ಮನವಿ ಮಾಡಿದರು. 
ಶಿಕ್ಷೆ ಪ್ರಮಾಣ ಪ್ರಕಟಣೆಗೂ ಮುನ್ನ ಸಿರ್ಸಾದ ಫುಲ್‌ಕನ್‌ ಗ್ರಾಮದಲ್ಲಿ ಡೇರಾ ಸಚ್ಚಾ ಸೌದಾದ ಬೆಂಬಲಿಗರು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿರುವುದು ವರದಿಯಾಗಿದೆ.
ಗುರ್ಮೀತ್‌ ದೋಷಿ ಎಂದು ಆದೇಶ ಪ್ರಕಟವಾದ ಬಳಿಕ ಶುಕ್ರವಾರ ಸಿರ್ಸಾದಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನ ಸಾವಿಗೀಡಾದರು. ಈ ಸಂಬಂಧ 52 ಪ್ರಕರಣಗಳನ್ನು ದಾಖಲಿಸಲಾಗಿದ್ದು, 926 ಜನರನ್ನು ಬಂಧಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರೋಹ್ಟಕ್‌ನಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗಾಗಿ ಪೊಲೀಸರು ಹಾಗೂ ಸೇನೆ  ನಿಯೋಜನೆಯಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. 
* ಈ ವಲಯದಲ್ಲಿ ಆಕ್ಷೇಪಾರ್ಹ ವಸ್ತುಗಳನ್ನು ಮುಚ್ಚಿಡಲಾಗಿದ್ದು, ವಿಚಾರಣೆ ಮುಂದುವರಿದೆ. ದೊಣ್ಣೆಗಳು ಸೇರಿದಂತೆ ದಾಳಿಗೆ ಬಳಕೆಯಾಗುವ 100ಕ್ಕೂ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
–ನವ್‌ದೀಪ್‌ ಸಿಂಗ್‌ ವಿರ್ಕ್‌, ಐಜಿಪಿ, ರೋಹ್ಟಕ್‌ ವಲಯ

ಪ್ರಚಲಿತ ವಿದ್ಯಮಾನ : ಜುಲೈ 2017: ಆರ್ಥಿಕ ಸುಧಾರಣಾ ಕ್ರಮ: ಭಾರತವನ್ನು ಹೊಗಳಿದ ಜಿ20 ರಾಷ್ಟ್ರಗಳು

ಹ್ಯಾಂಬರ್ಗ್‌: ಸುಸ್ಥಿರ ಆರ್ಥಿಕ ಬೆಳವಣಿಗೆ, ನವೋದ್ಯಮ ನಿಧಿ (ಸ್ಟಾರ್ಟಪ್ ಫಂಡಿಂಗ್) ಒದಗಿಸುವಿಕೆ, ಉದ್ಯಮಕ್ಕೆ ಉತ್ತೇಜನ ಹಾಗೂ ಕಾರ್ಮಿಕ ಸುಧಾರಣೆಗೆ ಭಾರತ ಕೈಗೊಂಡಿರುವ ಕ್ರಮಗಳನ್ನು ಜಿ20 ರಾಷ್ಟ್ರಗಳು ಶ್ಲಾಘಿಸಿವೆ.

‘ಹಣಕಾಸು ಕ್ಷೇತ್ರದಲ್ಲಿ, ವಿದ್ಯುನ್ಮಾನ ಅಥವಾ ವಿನಿಮಯ ಮಾರುಕಟ್ಟೆಯ ಮೂಲಕ ಭಾರತವು ಸರ್ಕಾರಿ ಬಾಂಡ್‌ಗಳ ವಾಯಿದಾ ವಹಿವಾಟು ಜನಪ್ರಿಯಗೊಳಿಸುತ್ತಿದೆ’ ಎಂದು ಹ್ಯಾಂಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಸಿದ್ಧಪಡಿಸಲಾದ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ನವೋದ್ಯಮದ (ಸ್ಟಾರ್ಟಪ್) ಮೂಲಕ ಭಾರತವು ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ಒದಗಿಸುತ್ತಿದೆ. ತನ್ಮೂಲಕ ಉದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಜಿ20 ಸದಸ್ಯ ರಾಷ್ಟ್ರಗಳು ಈ ವರ್ಷ ಕೈಗೊಂಡಿರುವ ಕ್ರಮಗಳಲ್ಲಿ ಇವುಗಳೂ ಸೇರಿವೆ. ಕಾರ್ಮಿಕರಿಗೆ ಭದ್ರತೆ, ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ಮತ್ತಿತರ ಕ್ರಮಗಳ ಮೂಲಕ ಭಾರತವು ಕಾರ್ಮಿಕ ಸುಧಾರಣೆ ಜಾರಿಗೆ ತರುತ್ತಿದೆ ಎಂದು ಎಂದು ಕಾರ್ಯಸೂಚಿಯಲ್ಲಿ ಹೇಳಲಾಗಿದೆ.

ಉದ್ಯಮಕ್ಕೆ ಉತ್ತೇಜನ ನೀಡುವ ರಾಷ್ಟ್ರಗಳ ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಕಳೆದ ವರ್ಷ ಭಾರತವು 130ನೇ ಸ್ಥಾನದಲ್ಲಿತ್ತು. ಇದನ್ನು 50ರ ಒಳಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಎನ್‌ಡಿಎ ಸರ್ಕಾರ ಕಳೆದ ವರ್ಷ ಹೇಳಿತ್ತು.

ಪ್ರಚಲಿತ ವಿದ್ಯಮಾನ : ಜುಲೈ 2017: ವಿಶ್ವ ಕೊಂಕಣಿ ಕೇಂದ್ರದಿಂದ ಎರಡು ಪ್ರಶಸ್ತಿ

ಮಂಗಳೂರು: ಬಸ್ತಿ ವಾಮನ ಶೆಣೈಯವರು 80 ವರ್ಷಪೂರೈಸಿದ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರವು ಶೆಣೈಯವರ ಹೆಸರಿನಲ್ಲಿ ತಲಾ ₹ 1 ಲಕ್ಷ ನಗದು ಒಳಗೊಂಡ 2 ಪ್ರಶಸ್ತಿಗಳನ್ನು ನೀಡಲಿದೆ.
ಕೊಂಕಣಿ ಭಾಷಿಕರಾಗಿ, ಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಸಾಧನೆ ಮಾಡಿದ ವ್ಯಕ್ತಿ ಮಾತ್ರವಲ್ಲದೇ ಕೊಂಕಣಿ ಭಾಷಿಕರಿಂದ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆ, ಕೊಂಕಣಿ ಭಾಷಿಕರ ಆಡಳಿತವಿರುವ ಸಂಸ್ಥೆಗಳು, ಸಮಾಜ ಸೇವೆ, ಆರೋಗ್ಯ, ವಿಜ್ಞಾನ, ಪತ್ರಿಕಾರಂಗ, ಕಲೆ, ವಾಣಿಜ್ಯೋದ್ಯಮ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಪ್ರಶಸ್ತಿಗೆ ಅರ್ಹರು.
ಅರ್ಜಿಗಳನ್ನು www.vishwakonkani.org ವೆಬ್‌ಸೈಟ್‌ನಿಂದ ಪಡೆಯಬಹುದು. ಸೆ.20ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ಅಧ್ಯಕ್ಷರು, ಬಿ.ವಿ.ಎಸ್ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಆಯ್ಕೆ ಸಮಿತಿ, ವಿಶ್ವ ಕೊಂಕಣಿ ಕೇಂದ್ರ, ಲೋಬೊ ಪ್ರಭು ನಗರ, ಕೊಂಕಣಿ ಗಾಂವ, ಶಕ್ತಿನಗರ, ಮಂಗಳೂರು-575 016’.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...